unfoldingWord 28 - ಐಶ್ವರ್ಯವಂತನಾದ ಯುವ ಅಧಿಕಾರಿ

概要: Matthew 19:16-30; Mark 10:17-31; Luke 18:18-30
文本編號: 1228
語言: Kannada
聽眾: General
目的: Evangelism; Teaching
Features: Bible Stories; Paraphrase Scripture
狀態: Approved
腳本是翻譯和錄製成其他語言的基本指南,它們需要根據實際需要而進行調整以適合不同的文化和語言。某些使用術語和概念可能需要有更多的解釋,甚至要完全更換或省略。
文本文字

ಒಂದು ದಿನ ಐಶ್ವರ್ಯವಂತನಾದ ಯುವ ಅಧಿಕಾರಿಯು ಯೇಸುವಿನ ಬಳಿಗೆ ಬಂದು, "ಒಳ್ಳೆಯ ಬೋಧಕನೇ, ನಿತ್ಯಜೀವವನ್ನು ಪಡೆದುಕೊಳ್ಳಲು ನಾನೇನು ಮಾಡಬೇಕು?" ಎಂದು ಕೇಳಿದನು. ಯೇಸು ಅವನಿಗೆ, "ನನ್ನನ್ನು ಒಳ್ಳೆಯವನೆಂದು ಯಾಕೆ ಕರೆಯುತ್ತೀ? ದೇವರೊಬ್ಬನೇ ಹೊರತು ಮತ್ತಾವನೂ ಒಳ್ಳೆಯವನಿಲ್ಲ. ಆದರೆ ನೀನು ನಿತ್ಯಜೀವವನ್ನು ಪಡೆದುಕೊಳ್ಳಲು ಬಯಸಿದರೆ, ದೇವರ ನಿಯಮಗಳನ್ನು ಅನುಸರಿಸು" ಎಂದು ಹೇಳಿದನು.

"ನಾನು ಅನುಸರಿಸಬೇಕಾದವುಗಳು ಯಾವುವು?" ಎಂದು ಅವನು ಕೇಳಿದ. ಯೇಸು, "ನರಹತ್ಯ ಮಾಡಬಾರದು, ವ್ಯಭಿಚಾರ ಮಾಡಬಾರದು, ಕದಿಯಬಾರದು, ಸುಳ್ಳು ಸಾಕ್ಷಿ ಹೇಳಬಾರದು. ನಿನ್ನ ತಂದೆತಾಯಿಗಳನ್ನು ಸನ್ಮಾನಿಸಬೇಕು. ಮತ್ತು ನಿನ್ನ ಹಾಗೆಯೆ ನಿನ್ನ ನೆರೆಯವನನ್ನು ಪ್ರೀತಿಸಬೇಕು ಎಂಬವುಗಳೇ" ಎಂದು ಉತ್ತರಿಸಿದನು.

ಆದರೆ ಯುವಕನು, "ನಾನು ಬಾಲ್ಯದಿಂದಲೂ ಇವೆಲ್ಲನ್ನು ಸರಿಯಾಗಿ ಅನುಸರಿಸುತ್ತಾ ಬಂದಿದ್ದೇನೆ. ನಿತ್ಯವಾಗಿ ಜೀವಿಸಲು ನಾನು ಇನ್ನೂ ಏನು ಮಾಡಬೇಕು?" ಎಂದು ಹೇಳಿದನು. ಯೇಸು ಅವನನ್ನು ದೃಷ್ಟಿಸಿ ನೋಡಿ ಅವನನ್ನು ಪ್ರೀತಿಸಿದನು.

ಯೇಸು ಅವನಿಗೆ , "ನೀನು ಪೂರ್ಣನಾಗುವುದಕ್ಕೆ ಬಯಸುವುದಾದರೆ, ಹೋಗಿ ನಿನಗಿರುವುದನ್ನೆಲ್ಲಾ ಮಾರಿ, ಬಡವರಿಗೆ ಕೊಡು, ಆಗ ನಿನಗೆ ಪರಲೋಕದಲ್ಲಿ ಸಂಪತ್ತಿರುವುದು. ಅನಂತರ ನೀನು ಬಂದು ನನ್ನನ್ನು ಹಿಂಬಾಲಿಸು" ಎಂದು ಉತ್ತರಿಸಿದನು.

ಯೌವನಸ್ಥನು ಯೇಸು ಹೇಳಿದ ಮಾತನ್ನು ಕೇಳಿದಾಗ ತುಂಬಾ ದುಃಖಿತನಾದನು, ಏಕೆಂದರೆ ಅವನು ಬಹಳ ಐಶ್ವರ್ಯವಂತನಾಗಿದ್ದನು ಮತ್ತು ಅವನು ತನಗಿರುವಂಥ ವಸ್ತುಗಳನ್ನೆಲ್ಲಾ ಬಿಟ್ಟುಕೊಡಲು ಬಯಸಲಿಲ್ಲ. ಅವನು ಯೇಸುವಿನಿಂದ ತಿರುಗಿಕೊಂಡು ಹೊರಟುಹೋದನು.

ತರುವಾಯ ಯೇಸು ತನ್ನ ಶಿಷ್ಯರಿಗೆ, "ಐಶ್ವರ್ಯವಂತರು ದೇವರ ರಾಜ್ಯದಲ್ಲಿ ಸೇರುವುದು ಎಷ್ಟೋ ಕಷ್ಟ! ಐಶ್ವರ್ಯವಂತನು ದೇವರ ರಾಜ್ಯದಲ್ಲಿ ಸೇರುವುದಕ್ಕಿಂತ ಒಂಟೆಯು ಸೂಜಿಕಣ್ಣಿನಲ್ಲಿ ನುಗ್ಗುವುದು ಸುಲಭ" ಎಂದು ಹೇಳಿದನು

ಯೇಸು ಹೇಳಿದ ಮಾತನ್ನು ಶಿಷ್ಯರು ಕೇಳಿದಾಗ ಅವರಿಗೆ ಆಘಾತವಾಯಿತು. ಅವರು, "ಹಾಗಾದರೆ ಯಾರಿಗೆ ರಕ್ಷಣೆಯಾದೀತು?" ಎಂದು ಹೇಳಿದರು.

ಯೇಸು ತನ್ನ ಶಿಷ್ಯರನ್ನು ನೋಡಿ, "ಜನರು ತಮ್ಮನ್ನು ತಾವು ರಕ್ಷಿಸಿಕೊಳ್ಳುವದು ಅಸಾಧ್ಯ, ಆದರೆ ದೇವರಿಗೆ ಮಾಡಲು ಅಸಾಧ್ಯವಾದ್ದದು ಯಾವುದು ಇಲ್ಲ" ಎಂದು ಹೇಳಿದನು.

ಪೇತ್ರನು ಯೇಸುವಿಗೆ, "ಶಿಷ್ಯರಾದ ನಾವು ಎಲ್ಲವನ್ನೂ ಬಿಟ್ಟು ನಿನ್ನನ್ನು ಹಿಂಬಾಲಿಸಿದ್ದೇವೆ, ನಮಗೆ ಸಿಗುವ ಪ್ರತಿಫಲವೇನು?" ಎಂದು ಕೇಳಿದನು.

ಯೇಸು, "ನನ್ನ ನಿಮಿತ್ತ ಮನೆಗಳನ್ನಾಗಲಿ, ಸಹೋದರರನ್ನಾಗಲಿ, ಸಹೋದರಿಯರನ್ನಾಗಲಿ, ತಂದೆಯನ್ನಾಗಲಿ, ತಾಯಿಯನ್ನಾಗಲಿ, ಮಕ್ಕಳನ್ನಾಗಲಿ, ಭೂಮಿಯನ್ನಾಗಲಿ, ತೊರೆದುಬಿಟ್ಟಿರುವ ಪ್ರತಿಯೊಬ್ಬನೂ ಎಲ್ಲವನ್ನೂ ನೂರರಷ್ಟಾಗಿ ಹೊಂದುವನು. ಅಲ್ಲದೆ ನಿತ್ಯಜೀವವನ್ನು ಪಡೆದುಕೊಳ್ಳುವನು. ಆದರೆ ಈಗ ಮೊದಲಿನವರಾದ ಬಹು ಮಂದಿ ಕಡೆಯವರಾಗುವರು ಮತ್ತು ಕಡೆಯವರಾದ ಬಹು ಮಂದಿ ಮೊದಲಿನವರಾಗುವರು" ಎಂದು ಉತ್ತರಿಸಿದನು.